top of page
Search

ಸತ್ಯ ಎಸ್ ಬರೆಯುತ್ತಾರೆ:

2020-21ರಲ್ಲಿ ಒಂದು ವರ್ಷಕ್ಕೂ ಹೆಚ್ಚುಕಾಲ ನಡೆದ ರೈತರ ಸತ್ಯಾಗ್ರಹ ಜಗದ್ವಿಖ್ಯಾತ ಹೋರಾಟವೆಂದು ದಾಖಲಾಗಿದೆ.

ಪ್ರಪಂಚದ ಮೂಲೆಮೂಲೆಗಳಲ್ಲಿ ತಿಂಗಳುಗಳ ಕಾಲ ಇದಕ್ಕೆ ಬೆಂಬಲಾತ್ಮಕ ಚಳವಳಿಗಳು ನಡೆದವು. ವಿದೇಶಿ ಸರ್ಕಾರಗಳು ರೈತರನ್ನು ಬೆಂಬಲಿಸಿ ಭಾರತದ ಬಿಜೆಪಿ ಸರ್ಕಾರಕ್ಕೆ ಪತ್ರ ಬರೆದವು. ಜಗತ್ತಿನ ಆರ್ಥಿಕ ತಜ್ಞರು, ವಿಶ್ವವಿದ್ಯಾಲಯಗಳ ವಿದ್ವಾಂಸರು, ವಿದ್ಯಾರ್ಥಿ ಸಮೂಹ, ಸಾಮಾಜಿಕ ವಿಜ್ಞಾನಿಗಳು, ಕೃಷಿ ಪಂಡಿತರು, ಪ್ರಾಜ್ಞರು, ಸಹೃದಯಿಗಳು ರೈತರ ಬೆಂಬಲಕ್ಕೆ ನಿಂತರು. ಇಡೀ ಚಳವಳಿಯೇ ಒಂದು ವಿಶ್ವವಿದ್ಯಾಲಯ, ಬದುಕಿನ ಮಹತ್ವದ ಕಲಿಕೆಗಳೆಲ್ಲ ಇಲ್ಲಿ ತೆರೆದ ಪುಸ್ತಕದಂತಿವೆ ಎಂದು ಹೆಸರಾಯಿತು ಆ ಸತ್ಯಾಗ್ರಹ.

ಅಂತಹ ಮಹತ್ವದ ಹೋರಾಟ ಕುರಿತು ಕೇಸರಿ ಹರವೂ ಅವರು ಮಾಡಿರುವ ದಾಖಲಾತಿಯೇ "ಕಿಸಾನ್ ಸತ್ಯಾಗ್ರಹ" ಎಂಬ ಡಾಕ್ಯುಮೆಂಟರಿ ಚಲನಚಿತ್ರ.

ಚರಿತ್ರೆಯ ಒಂದು ಪ್ರಮುಖ ಅಧ್ಯಾಯವನ್ನು ನಮ್ಮದಾಗಿಸಿಕೊಳ್ಳಲು ಈ ಚಿತ್ರವನ್ನು ನೋಡಲೇ ಬೇಕು.

ಕೇಸರಿ ಅವರ ಚಲನಚಿತ್ರ ಶೈಲಿ ಬಹಳ ವಿಭಿನ್ನವಾದದ್ದು. ಅವರ ಚಿತ್ರಕ್ಕೆ ಒಂದು ನಿಧಾನ ಗತಿಯ ಲಯ ಇದೆ. ಅದು ಈ ಭೂಮಿಗೆ, ನಿಸರ್ಗಕ್ಕೆ, ನಮ್ಮ ಬದುಕಿಗೆ ಇರಬೇಕಾದ ಲಯ ಎಂದು ನನಗೆ ಯಾವಾಗಲೂ ಭಾಸವಾಗುತ್ತದೆ. ಆ ಲಯ ನಮ್ಮ ಹೃದಯದ ಬಡಿತದಂತೆ, ರಕ್ತದೊತ್ತಡದಂತೆ. ಹೃದಯ ಬಡಿತ, ರಕ್ತದೊತ್ತಡಗಳು ಹೆಚ್ಚಾದರೂ ಸಮಸ್ಯೆ, ಕಡಿಮೆಯಾದರೂ ತೊಂದರೆ. ಇವು ಒಂದು ಗತಿಯಲ್ಲಿ, ಲಯದಲ್ಲಿ ಇದ್ದರೆ ಈ ದೇಹ, ಈ ಬದುಕು ನಿಸರ್ಗದೊಂದಿಗೆ ಲಯವಾಗಿ ಸಾಗಬಹುದು. ಈ ಲಯ ಕೇಸರಿ ಅವರ ಎಲ್ಲ ಚಿತ್ರಗಳಲ್ಲೂ ಪ್ರಧಾನವಾಗಿದೆ. ಅದು ಅವರ ಬದುಕಿನ ಲಯವೂ ಎನಿಸುತ್ತದೆ.

ಚಳವಳಿಯ ಕಾರಣಕ್ಕೆ, ರೈತರ ಕಾರಣಕ್ಕೆ, ಡಾಕ್ಯುಮೆಂಟರಿ ಮಾಧ್ಯಮದ ಕಾರಣಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಕಾರಣಕ್ಕೆ, ಕೇಸರಿ ಅವರ ಸಿನಿಮಾ ಶೈಲಿಯ ಕಾರಣಕ್ಕೆ... ದಯಮಾಡಿ ಈ ಚಿತ್ರ ನೋಡಿ.

7 views0 comments
bottom of page